ಅಮಾಸೆಬೈಲು: ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ಗ್ರಾಮದ ರಟ್ಟಾಡಿ ನಿವಾಸಿ ಮಧುರಾ ಹೆಬ್ಬಾರ್(22) ಪತ್ತೆಯಾಗಿದ್ದಾರೆ. ಕುಂದಾಪುರ ವಿಶೇಷ ಪೊಲೀಸ್ ತಂಡ ಬೆಂಗಳೂರಿನಲ್ಲಿ ಈಕೆಯನ್ನು ಪತ್ತೆ ಹಚ್ಚಿದ್ದು ಸೋಮವಾರ ಕುಂದಾಪುರಕ್ಕೆ ಕರೆತಂದು ಹೇಳಿಕೆ ಪಡೆದುಕೊಂಡಿದ್ದಾರೆ. ಅನ್ಯಕೋಮಿನ ಯುವಕನೊಂದಿಗೆ ಪರಾರಿಯಾಗಿದ್ದಾರೆ ಎಂಬ ಶಂಕೆಯ ನೆಲೆಯಲ್ಲಿ ಕೂಲಂಕುಶ ವಿಚಾರಣೆ ನಡೆಸಿದ ಪೊಲೀಸರು ಸೂಕ್ಷ್ಮ ಪ್ರಕರಣ ಎಂಬ ನೆಲೆಯಲ್ಲಿ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇದು ನನಗೆ ಇಷ್ಟವಿಲ್ಲದ ಮದುವೆ. ಗಂಡನ ಮನೆಯಲ್ಲಿ ನನಗೆ ಸ್ವಾತಂತ್ರ್ಯವಿಲ್ಲ. ನಾನು ಎಲ್ಲಿಗೂ ಹೋಗಲ್ಲ. ವಿಚ್ಛೇದನ ನೀಡಲು ತೀರ್ಮಾನಿಸಿದ್ದೇನೆ. ವಿಚ್ಛೇದನ ಪ್ರಕ್ರಿಯೆ ಮುಗಿಯುವ ತನಕ ಪೇಯಿಂಗ್ ಗೆಸ್ಟ್ ಆಗಿರುತ್ತೇನೆ ಎಂಬ ಮಧುರಾ ಹೆಬ್ಬಾರ್ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಮದುವೆಯಾದ ಬಳಿಕವು ಪದವಿ ಓದುತ್ತಿರುವ ಮಧುರಾ ಹೆಬ್ಬಾರ್(22) ನ.5ರಂದು ಲೈಬ್ರೇರಿಗೆ ಹೋಗಿ ಬರುವುದಾಗಿ ಹೇಳಿ ಹೊರಟವರು ಮನೆಗೆ ಮರಳಿಲ್ಲ ಎಂದು ಪತಿ ರಾಘವೇಂದ್ರ ಹೆಬ್ಬಾರ್ ಅಮಾಸೆಬೈಲು ಠಾಣೆಗೆ ದೂರು ನೀಡಿದ್ದರು. ಈ ನಡುವೆ ಇದೇ ದಿನ ಊರಿನ ಸರ್ಫರಾಜ್ ಎಂಬ ಯುವಕ ನಾಪತ್ತೆಯಾದ ಬಗ್ಗೆ ಇನ್ನೊಂದು ದೂರು ದಾಖಲಾಗಿತ್ತು. ಈಕೆಯನ್ನು ಅಪಹರಿಸಲಾಗಿದೆ ಎಂಬ ಶಂಕೆಯ ನೆಲೆಯಲ್ಲಿ ಹಿಂದೂ ಪರ ಸಂಘಟನೆಗಳು ಠಾಣೆಗೆ ಮುತ್ತಿಗೆ ಹಾಕಿದ್ದವು. ಪ್ರಕರಣದ ಶೀಘ್ರಗತಿಯ ತನಿಖೆಗೆ ಮುಂದಾದ ಕುಂದಾಪುರ ಡಿವೈಎಸ್ಪಿ ಸಿ.ಬಿ.ಪಾಟೀಲ್, ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್, ಅಮಾಸೆಬೈಲು ಠಾಣಾಧಿಕಾರಿ ಸುನಿಲ್ ನೇತತ್ವದ ಪೊಲೀಸ್ ತಂಡ ವಿವಾಹಿತೆಯನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಸೋಮವಾರ ಕುಂದಾಪುರಕ್ಕೆ ಕರೆತಂದಿದ್ದಾರೆ.
ಈ ನಡುವೆ ಸರ್ಫರಾಜ್ ಅವರ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದ್ದು ಅಮಾಸೆಬೈಲು ಬೂದಿ ಮುಚ್ಚಿದ ಕೆಂಡದಂತಿದೆ. ಮನೆಗೆ ಪೊಲೀಸ್ ಕಾವಲು ಇರಿಸಲಾಗಿದೆ. ಅಮಾಸೆಬೈಲು ವಠಾರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ.
ಈ ನಡುವೆ ಸರ್ಫರಾಜ್ ಅವರ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದ್ದು ಅಮಾಸೆಬೈಲು ಬೂದಿ ಮುಚ್ಚಿದ ಕೆಂಡದಂತಿದೆ. ಮನೆಗೆ ಪೊಲೀಸ್ ಕಾವಲು ಇರಿಸಲಾಗಿದೆ. ಅಮಾಸೆಬೈಲು ವಠಾರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ.