ಕುಂದಾಪುರ: ಇಲ್ಲಿನ ಸಂಗಮ್ ಜಂಕ್ಷನ್ ಸಮೀಪದ ಹಿರಿಯ ವ್ಯಾಪಾರಿ, ಸಮಾಜ ಸೇವಕ ರೋಯಲ್ ಮೆಟಲ್ಸ್ ವರ್ಕ್ಸ್ ಮಾಲೀಕ ಬಾಜಿಲ್ ಡಿಸೋಜ(60) ಬುಧವಾರ ಸಂಜೆ ಚೂರಿ ಇರಿತಕ್ಕೊಳಗಾಗಿದ್ದು ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದುಷ್ಕೃತ್ಯ ಎಸಗಿರುವ ಅವರ ಹತ್ತಿರದ ಸಂಬಂಧಿ ಡೊಲ್ಪಿ ಡಿಸೋಜ(38) ಎಂಬಾತನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
'ಎಚ್ಐವಿ ಇದೆ ಎಂದು ಬಾಜಿಲ್ ಛೇಡಿಸುತ್ತಿದ್ದರಿಂದ ಕತ್ಯ ಎಸಗಿದ್ದೇನೆ' ಎಂದು ಆರೋಪಿ ಹೇಳಿಕೊಂಡಿದ್ದಾನೆ. ಕಸ್ಟಡಿಗೆ ತೆಗೆದುಕೊಂಡಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಕತ್ಯಕ್ಕೆ ಬಳಸಿದ ಚೂರಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಘಟನೆಯ ವಿವರ: ರೋಯಲ್ ಮೆಟಲ್ಸ್ ವರ್ಕ್ಸ್ನಲ್ಲಿ ವ್ಯವಹಾರ ನಿರ್ವಹಿಸುತ್ತಿದ್ದ ಬಾಜಿಲ್ ಡಿಸೋಜ ಅವರನ್ನು ಸಂಜೆ 5.30 ಸುಮಾರಿಗೆ ಭೇಟಿಯಾದ ಅವರ ಅಕ್ಕನ ಮಗ ಡೊಲ್ಪಿ ಡಿಸೋಜ ಕುಶಲೋಪಹರಿ ನಡೆಸುತ್ತಲೆ ಬಗಲಿನಲ್ಲಿದ್ದ ಚೂರಿ ತೆಗೆದು ಅವರ ಹೊಟ್ಟೆಗೆ ಇರಿದಿದ್ದ. ಚೂರಿ ಇರಿತಕ್ಕೊಳಗಾದ ಅವರು ಬೊಬ್ಬೆ ಹೊಡೆದು ಕುಸಿದಿದ್ದು ಮತ್ತೊಂದು ಬಾರಿ ಚೂರಿ ಇರಿಯಲು ಮುಂದಾದಾಗ ಅಂಗಡಿಯಲ್ಲಿದ್ದ ಕಾರ್ಮಿಕರು ತಡೆದಿದ್ದಾರೆ. ಕಿಬ್ಬೊಟ್ಟೆಗೆ ಚೂರಿಯಿಂದ ಇರಿಯಲಾಗಿದ್ದು ತೀವ್ರ ರೀತಿಯಲ್ಲಿ ಘಾಸಿಯಾಗಿದೆ. ರಕ್ತದ ಮಡುವಿನಲ್ಲಿ ಬಿದ್ದ ಬಾಜಿಲ್ ಅವರನ್ನು ತತ್ಕ್ಷಣ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಕತ್ಯ ಎಸಗಿ ಕದಲದೆ ನಿಂತಿದ್ದ ಆರೋಪಿ ಡೊಲ್ಪಿ ಡಿಸೋಜನನ್ನು ಅಂಗಡಿ ಕಾರ್ಮಿಕರ ಸಹಕಾರದಿಂದ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಕೊಂಚ ಮಾನಸಿಕ ಅಸ್ವಸ್ಥ: ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ ಡೊಲ್ಪಿ ಐದಾರು ವರ್ಷಗಳ ಹಿಂದೆ ಬಾಜಿಲ್ ಡಿಸೋಜ ಅವರ ಅಂಗಡಿ ಪಕ್ಕದ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ನಂತರ ಕೆಲ ದಿನ ಮೆಟಲ್ ವರ್ಕ್ಸ್ನಲ್ಲಿ ನಿರತನಾಗಿದ್ದ. ಕೊಂಚ ಮಾನಸಿಕ ಅಸ್ವಸ್ಥನಂತೆ ಇತ್ತೀಚೆಗೆ ವರ್ತಿಸುತ್ತಿದ್ದ ಎಂದು ಸ್ಥಳೀಯರು, ಕುಟುಂಬಿಕರು ಹೇಳಿದ್ದಾರೆ.