ಕಟಪಾಡಿ: ಹಸೆಮಣೆಯೇರಿ ತಾಳಿ ಕಟ್ಟಿಸಿಕೊಂಡ ಬಳಿಕ ಗಂಡನ ಒಲ್ಲೆ ಎಂದ ಮದುಮಗಳು ಗಂಡನೊಂದಿಗೆ ತೆರಳಲು ನಿರಾಕರಿಸಿದ್ದರಿಂದ ಅಸಹಾಯಕರಾದ ವರನ ಕಡೆಯವರು ಠಾಣೆ ಮೆಟ್ಟಿಲು ಹತ್ತಿದ ಘಟನೆ ಕಾಪುವಿನಲ್ಲಿ ಸೋಮವಾರ ನಡೆದಿದೆ. ಉಚ್ಚಿಲದ ವಧು ಶಿವಾನಿ ಮತ್ತು ಕಾಪು ಚಂದ್ರನಗರದ ವರ ಉತ್ತಮ (ಹೆಸರುಗಳನ್ನು ಬದಲಿಸಲಾಗಿದೆ) ಅವರ ವಿವಾಹ ಸಮಾರಂಭ ಕಾಪು ಶ್ರೀ ವೀರಭದ್ರ ದೇವಸ್ಥಾನದಲ್ಲಿ ನಡೆಯಿತು.
ತಾಳಿ ಕಟ್ಟಿಸಿಕೊಂಡ ವಧು ತನಗೆ ಈ ಮದುವೆ ಇಷ್ಟವಿಲ್ಲದಿದ್ದರೂ, ಮನೆಯವರು ಒತ್ತಾಯದಿಂದ ಮದುವೆ ಮಾಡಿಸಿದ್ದಾರೆ, ಆತನಿಗೆ ಕುಡಿತದ ಚಟವಿದೆ ಎಂಬ ನೆವ ಹೇಳಿ ಮದುವೆ ತನಗೆ ಬೇಡ ಎಂದು ಗಂಡನೊಂದಿಗೆ ತೆರಳಲು ನಿರಾಕರಿಸಿದ್ದಾಳೆ.
ಇದರಿಂದ ವಿಚಲಿತರಾದ ವರನ ಕಡೆಯವರು ಠಾಣೆಗೆ ದೂರು ಕೊಡಲು ಹೋಗಿದ್ದು ಪೊಲೀಸರು ಎರಡೂ ಕಡೆಯವರನ್ನು ಕರೆದು ಮಾತನಾಡಿಸಿ ಹುಡುಗಿಯ ಕಡೆಯವರಿಗೆ ವಧುವಿನ ಮನ ಒಲಿಸುವಂತೆ ತಿಳಿಸಿ, ಇನ್ನೊಂದು ವಾರ ಕಾದು ನೋಡಿ ಮನ ಪರಿವರ್ತನೆಯಾಗದಿದ್ದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಯಿತು.