ಕುಂದಾಪುರ: ತಾಲೂಕಿನ ಕುಂಭಾಸಿ ಗ್ರಾಮದ ಆನೆಗುಡ್ಡೆ ಹಾಡಿಯಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆ ಕಾಡ್ಗಿಚ್ಚು ಹಬ್ಬಿದ್ದು ಸುಮಾರು 15 ಎಕರೆಯಷ್ಟು ಹಾಡಿ ವ್ಯಾಪ್ತಿ ಬೆಂಕಿಗಾಹುತಿಯಾಗಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು ನಂತರ ವಿಕೋಪಕ್ಕೆ ತಿರುಗಿತ್ತು. ಹಾಡಿಯಲ್ಲಿನ ಗೇರು, ಅಕೇಶಿಯಾ ಮರಗಳು ಬೆಂಕಿಯ ಕೆನ್ನಾಲಿಗೆಗೆ ದಹಿಸಿಹೋಗಿವೆ.
ಕುಂದಾಪುರ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಮತ್ತು ಸ್ಥಳೀಯರ ಸತತ ಕಾರ್ಯಾಚರಣೆಯಿಂದ ಬೆಂಕಿ ತಹಬಂದಿಗೆ ಬಂದಿದೆ. ಹಾಡಿಯಲ್ಲಿ ಒಣಹುಲ್ಲು ದಟ್ಟವಾಗಿ ಬೆಳೆದಿದ್ದು ಹುಲ್ಲು ಬೆಂಕಿ ಕಿಡಿಗೆ ತುತ್ತಾಗಿ ಗಾಳಿಯ ಹೊಡೆತಕ್ಕೆ ವ್ಯಾಪಿಸಿರಬಹುದು ಎಂದು ಶಂಕಿಸಲಾಗಿದೆ. ಹಾಡಿಯ ಆಚೆ ಈಚೆ ಮನೆ, ಮಠ, ದೇವಾಲಯಗಳಿದ್ದು ಅಗ್ನಿಶಾಮಕ ಠಾಣೆ ಸಿಬ್ಬಂದಿಗಳ ಸಮಯೋಚಿತ ಕ್ರಮದಿಂದಾಗಿ ಅಪಾಯ ತಪ್ಪಿದೆ.