ಕುಂದಾಪುರ: ಜೀವನದ ಪೂರ್ಣತೆಗೆ ವಿಜ್ಞಾನ ಮತ್ತು ವೇದಾಂತ ಎರಡೂ ಬೇಕು. ವಿಜ್ಞಾನ ಹೇಗೆ ಎಂಬುದನ್ನು ತಿಳಿಸಿದರೆ, ವೇದಾಂತ ಯಾಕೆ ಎಂಬುದಕ್ಕೆ ಉತ್ತರ ನೀಡುತ್ತದೆ ಎಂದು ಕರ್ಣಾಟಕ ಬ್ಯಾಂಕ್ನ ನಿರ್ದೇಶಕ ಡಾ.ಎಚ್. ರಾಮಮೋಹನ್ ಹೇಳಿದರು.
ಕೋಟೇಶ್ವರದ ಶ್ರೀ ಶಂಕರ ಜಯಂತಿ ಉತ್ಸವ ಸಮಿತಿಯ ಆಶ್ರಯದಲ್ಲಿ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಳದಲ್ಲಿ ನಡೆದ ಶ್ರೀ ಶಂಕರ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಆಧುನಿಕತೆಯ ಸೋಗಿನಲ್ಲಿ ಮನುಷ್ಯ ಇಂದು ಬುದ್ಧಿಗೂ ಹೃದಯಕ್ಕೂ ಸಂಬಂಧವನ್ನೇ ಕಳೆದುಕೊಳ್ಳುತ್ತಿದ್ದಾನೆ. ಶತಮಾನಗಳ ಹಿಂದೆಯೇ ಈ ಸಂಬಂಧವನ್ನು ಧರ್ಮ ಮತ್ತು ವೇದಾಂತಗಳ ಮೂಲಕ ಗಟ್ಟಿಗೊಳಿಸಿದವರು ಶ್ರೀ ಶಂಕರ ಭಗವತ್ಪಾದರು. ಕಷ್ಟಗಳ ಸರಮಾಲೆಯನ್ನೇ ಎದುರಿಸಿ ಜಯಿಸಿದ ಶ್ರೀ ಶಂಕರರ ಜೀವನ ಮತ್ತು ಸಾಧನೆ ನಮಗೆ ಮಾರ್ಗದಶಿಯಾಗಬೇಕು ಎಂದರು.
ಡಾ.ಕೆ. ಸೋಮಶೇಖರ ಉಡುಪ ಶುಭಾಶಂಸನೆಗೈದರು. ದೇವಾಲಯದ ತಂತ್ರಿ ಕೆ. ಪ್ರಸನ್ನ ಕುಮಾರ ಐತಾಳರು ಡಾ. ರಾಮಮೋಹನ ಅವರನ್ನು ಸಮಿತಿಯ ಪರವಾಗಿ ಸನ್ಮಾನಿಸಿದರು. ಸಮಿತಿಯ ಉಪಾಧ್ಯಕ್ಷ ಕೆ. ಲಕ್ಷ್ಮೀನಾರಾಯಣ ಉಡುಪ ಮತ್ತು ಸಾಹಿತಿ ಜಿ.ಕೆ. ಐತಾಳ ಅತಿಥಿಗಳನ್ನು ಗೌರವಿಸಿದರು.
ಪ್ರೊ. ಶಂಕರ ರಾವ್ ಅತಿಥಿಗಳನ್ನು ಪರಿಚಯಿಸಿದರು. ಉತ್ಸವ ಸಮಿತಿಯ ಕಾರ್ಯದರ್ಶಿ ಅನಂತ ಪದ್ಮನಾಭ ಉಡುಪ ವರದಿ ಮಂಡಿಸಿದರು. ಗೌರವಾಧ್ಯಕ್ಷ ಬಿ.ಕೆ. ಪದ್ಮನಾಭ ಐತಾಳ, ಉತ್ಸವ ಸಮಿತಿಯ ನೂತನ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣ ಉಪಾಧ್ಯಾಯ ಇದ್ದರು. ನೂತನ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ಉತ್ಸವ ಸಮಿತಿಯ ಮಾಜಿ ಅಧ್ಯಕ್ಷ ಪ್ರೊ.ಕೆ. ವೆಂಕಟಕೃಷ್ಣ ಐತಾಳ ಸ್ವಾಗತಸಿ, ಶ್ರೀ ಶಂಕರ ಜಯಂತಿ ಉತ್ಸವ ಸಮಿತಿ ಕಾರ್ಯಚಟುವಟಿಕೆಗಳ ವಿವರ ನೀಡಿದರು. ಎಸ್. ಸೀತಾರಾಮ ಅಡಿಗ ವಂದಿಸಿದರು.
ಶ್ರೀ ಶಂಕರ ಜಯಂತಿ ಅಂಗವಾಗಿ ಸಮಿತಿ ಸದಸ್ಯರಿಂದ ಶ್ರೀ ಶಂಕರಾಚಾರ್ಯ ವಿರಚಿತ ಸ್ತೋತ್ರ ಪಠಣ, ಸೌಂದರ್ಯ ಲಹರಿ, ಲಿಂಗಾಷ್ಠಕ ಗಾಯನ, ಜಪ ನಡೆಯಿತು.
ಕುಂದಾಪ್ರ ಡಾಟ್ ಕಾಂ - editor@kundapra.com