ಕುಂದಾಪುರ: ಊರಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಯುವಕ ಮಂಡಲ, ಸಾರ್ವಜನಿಕ ಸಂಘ-ಸಂಸ್ಥೆಗಳ ಪಾತ್ರ ಪ್ರಮುಖ. ಯುವ ಸಂಘಟನೆಗೆ ರೂ.140 ಕೋಟಿ, ಸರ್ವರಿಗೂ ಶಿಕ್ಷಣ ಮತ್ತು ಕಡುಬಡವರ ಉಚಿತ ಶಿಕ್ಷಣಕ್ಕಾಗಿ ರೂ.17 ಸಾವಿರ ಕೋಟಿ ಈ ಸಾಲಿನ ಬಜೆಟ್ ನಲ್ಲಿ ಪ್ರಸ್ತಾಪಿಸಿದೆ. ಎಲ್ಲರೂ ಇದರ ಸದುಪಯೋಗ ಪಡಿಸಿಕೊಂಡು ಉನ್ನತ ಶಿಕ್ಷಣ ಪಡೆಯಿರಿ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ವಕ್ವಾಡಿ ಹೆಗ್ಗಾರಬೈಲು ಯುವಶಕ್ತಿ ಮಿತ್ರ ಮಂಡಲ (ರಿ) 16 ನೇ ವಾರ್ಷಿಕೋತ್ಸವದಲ್ಲಿ ಸನ್ಮಾನ, ಯುವ ಡ್ಯಾನ್ಸ್ ಅವಾರ್ಡ-2013 ರ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಜಾ ಪ್ರಭುತ್ವದಲ್ಲಿ ಸಮಾಜದ ಸಮಸ್ಯೆಗಳನ್ನು ತಿಳಿದು ಅದರ ಪರಿಹಾರ ನಾವೇ ಮಾಡಬೇಕು. ಶಿಕ್ಷಣ ಮತ್ತು ಆರೋಗ್ಯದ ವಿಚಾರದಲ್ಲಿ ರಾಜ್ಯದಲ್ಲಿಯೇ ಮುಂದಿರುವ ನಮ್ಮ ಜಿಲ್ಲೆಯ ಸ್ಥಾನಮಾನವನ್ನು ಉಳಿಸಿಕೊಳ್ಳಲು ಯುವಕರ ಪ್ರಯತ್ನ ಅತ್ಯಗತ್ಯ ಎಂದರು.
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಸಂತೋಷ್ ಕುಮಾರ್ ಶೆಟ್ಟಿ ಅವರನ್ನು ಉಡುಪಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಸಲ್ವಾಡಿ ಭಾಸ್ಕರ್ ಶೆಟ್ಟಿ ಸನ್ಮಾನಿಸಿದರು. ನಂತರ ಅವರು ಮಾತನಾಡಿ, ಉನ್ನತ ಆದರ್ಶಗಳೊಂದಿಗೆ ಬಾಳುತ್ತಿರುವವರನ್ನು ಮಾದರಿಯನ್ನಾಗಿ ಸ್ವೀಕರಿಸಿ, ಗಳಿಸಿದ ಜ್ಞಾನವನ್ನು ಉಪಯುಕ್ತ ರೀತಿಯಲ್ಲಿ ಬಳಸಿಕೊಂಡು ನಾವು ಮಾಡುವ ಸಾಮಥ್ರ್ಯದಲ್ಲಿ ಸಕರಾತ್ಮಕವಾಗಿ ಮುನ್ನೆಡೆದಾಗ ಯುವಕರು ಜಯಶಾಲಿಯಾಗಬಹುದು ಎಂದರು.
ಕಾಳಾವರ ಗ್ರಾಮ ಪಂ. ಅಧ್ಯಕ್ಷ ವಕ್ವಾಡಿ ಸತೀಶ್ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದರು. ಉಡುಪಿ ಜಿ.ಪಂ ಶಿಕ್ಷಣ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷ ಗಣಪತಿ ಶ್ರೀಯಾನ್, ಸಮಾಜ ಸೇವಕ ಮಲ್ಯಾಡಿ ಶಿವರಾಮ ಶೆಟ್ಟಿ, ತಾ.ಪಂ ಸದಸ್ಯ ದೀಪಕ್ ಕುಮಾರ್ ಶೆಟ್ಟಿ, ಯುವ ಶಕ್ತಿ ಮಿತ್ರಮಂಡಲದ ಅಧ್ಯಕ್ಷ ಸದಾಶಿವ ಶೆಟ್ಟಿಗಾರ್ ಉಪಸ್ಥಿತರಿದ್ದರು.
ರಂಜಿತ್ ಕುಮಾರ್ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ್ ಕುಲಾಲ್ ಸ್ವಾಗತಿಸಿದರು. ಶಿಕ್ಷಕ ಮಹೇಶ್ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು. ಸನ್ಮಾನ ಪತ್ರವನ್ನು ರಾಮಮೂರ್ತಿ ವಾಚಿಸಿದರು. ಸುದೀಂದ್ರ ವಂದಿಸಿದರು.
ಯುವ ಡ್ಯಾನ್ಸ್ ಅವಾರ್ಡ:
ಇದೇ ವೇದಿಕೆಯಲ್ಲಿ ನಡೆದ ತಾಲೂಕು ಮಟ್ಟದ ಫಿಲ್ಮ್ ಡ್ಯಾನ್ಸ್ ಸ್ಪಧರ್ೆಯಲ್ಲಿ ತ್ರಿಶೂಲ್ ಡ್ಯಾನ್ಸ್ ಆಕಾಡೆಮಿ ಪ್ರಥಮ, ಸ್ಫೂರ್ತಿ ಮತ್ತು ನಂದಿತ ಗ್ರೂಪ್ಸ್ ವಕ್ವಾಡಿ ದ್ವಿತೀಯ, ರಫೀಕ್ ಡ್ಯಾನ್ಸ್ ತಂಡ ಕೋಟೇಶ್ವರ ತೃತೀಯ ಸ್ಥಾನ ಪಡೆದರು.
ಕುಂದಾಪ್ರ ಡಾಟ್ ಕಾಂ - editor@kundapra.com