ಕುಂದಾಪುರ: ಕುಂದಾಪುರ ಪರಿಸರದಲ್ಲಿ ಎಲುಬು ಮತ್ತು ಕೀಲುಗಳ ಚಿಕಿತ್ಸೆಗಾಗಿಯೇ ಸ್ಥಾಪಿಸಲಾದ ವಿವೇಕ್ ಹಾಸ್ಪಿಟಲ್ ಫೆ.24 ರ ಭಾನುವಾರ ಲೋಕಾರ್ಪಣೆಗೊಳ್ಳಲಿದೆ.
ಆಸ್ಪತ್ರೆಯ ವೈಶಿಷ್ಟ್ಯವನ್ನು ವಿವರಿಸಲು ಆಸ್ಪತ್ರೆಯಲ್ಲೇ ಪತ್ರಿಕಾಗೋಷ್ಠಿಯನ್ನು ನಡೆಸಿದ ವೈದ್ಯಕೀಯ ನಿರ್ದೇಶಕ ಡಾ || ವಿವೇಕ್ ಕೆ.ಎಸ್. ಪ್ರತಿಯೊಂದು ವಿಭಾಗ ಮತ್ತು ವಿಶೇಷ ಉಪಕರಣಗಳ ಪರಿಚಯ ನೀಡಿದರು. ವೀಟು ಇವೆಂಟ್ ಇಂಜಿನಿಯರ್ಸ್ನ ಪ್ರಶಾಂತ್ ಶೆಟ್ಟಿ ಜತೆಗಿದ್ದರು.
ಮೂಳೆಗಳಿಗೆ ರಕ್ತ ಸರಬರಾಜಿಲ್ಲ. ಆದ್ದರಿಂದ ಚಿಕ್ಕ ಪೆಟ್ಟಾದರೂ ಸೋಂಕು ತಗಲುವ ಸಂಭವ ಜಾಸ್ತಿ. ಪೆಟ್ಟಾದ ತಕ್ಷಣ ಸೂಕ್ತ ಚಿಕಿತ್ಸೆ ದೊರೆತರೆ ಅಂಗ ವೈಕಲ್ಯವನ್ನು ತಪ್ಪಿಸಬಹುದು. ಮೂಳೆ ಚಿಕಿತ್ಸಾ ಕ್ಷೇತ್ರದಲ್ಲಿ ಇಂದು ಅಗಾಧ ಸಂಶೋಧನೆ, ಬೆಳವಣಿಗೆಗಳಾಗಿವೆ. ಬೆಂಗಳೂರು, ಮುಂಬೈ, ದೆಹಲಿಗಳಂತಹ ಮಹಾ ನಗರಗಳಲ್ಲಿ ಈ ಚಿಕಿತ್ಸಾ ಸೌಲಭ್ಯಗಳು ಸಿಗುತ್ತವೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ದುರ್ಲಭ. ಕಂಡ್ಲೂರಿನಂತಹ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ, ಬೆಳೆದ ತಾನು ತನ್ನೂರಿನ ಜನತೆಗೆ ಉತ್ತಮವಾದ ಕೊಡುಗೆಯನ್ನೇನಾದರೂ ನೀಡಬೇಕು ಎಂಬ ಉದ್ದೇಶದಿಂದ ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿರುವುದಾಗಿ ಡಾ || ವಿವೇಕ್ ವಿವರಿಸಿದರು.
ಚಿಕಿತ್ಸೆಯ ಗುಣಮಟ್ಟದಲ್ಲಿ ರಾಜಿ ಇಲ್ಲದೆ ಉನ್ನತ ಮಟ್ಟದ ಚಿಕಿತ್ಸೆಯನ್ನು ಸಾಮಾನ್ಯರಿಗೂ ಕೈಗೆಟುಕುವ ರೀತಿಯಲ್ಲಿ ನೀಡಬೇಕು ಎಂಬ ಗುರಿ ಹೊಂದಲಾಗಿದೆ. ಆಸ್ಪತ್ರೆಯಲ್ಲಿ ತಜ್ಞ ವೈದ್ಯಗಡಣ ಸದಾ ಸೇವೆಗೆ ಲಭ್ಯರಿದ್ದು, ಅಸ್ಥಿ ಚಿಕಿತ್ಸೆಯಲ್ಲಿ ಲಭ್ಯವಿರುವ ಎಲ್ಲಾ ಸ್ಪೆಷಾಲಿಟಿ, ಸೂಪರ್ ಸ್ಪೆಷಾಲಿಟಿ ಡಾಕ್ಟರುಗಳನ್ನೂ ಬೇರೆಡೆಯಿಂದ ಇಲ್ಲಿಗೆ ಅಗತ್ಯಾನುಸಾರ ಕರೆಸಲಾಗುವುದು. ಶೀಘ್ರದಲ್ಲೇ ಸಂಪೂರ್ಣಸುರಕ್ಷಾ, ಯಶಸ್ವಿನಿ ಯೋಜನೆಗಳನ್ನೂ ಅಳವಡಿಸಲಾಗುವುದು ಎಂದರು.
ನೆಲ ಅಂತಸ್ತು ಸಹಿತ ಎರಡು ಮಹಡಿಗಳನ್ನು ಹೊಂದಿದ ವಿವೇಕ್ ಹಾಸ್ಪಿಟಲ್ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸಾ ಯಂತ್ರೋಪಕರಣಗಳನ್ನು ಹೊಂದಿದೆ. ಆಸ್ಪತ್ರೆ ನಿಯಮಗಳನುಸಾರ ನಾನೂರು ಚದರಡಿ ವಿಸ್ತಾರದ ಎರಡು ಸರ್ವ ಸಜ್ಜಿತ ಆಪರೇಷನ್ ಥಿಯೇಟರ್ ಹೊಂದಿದ್ದು, ಸಂಪೂರ್ಣ ಶಬ್ದ ಮತ್ತು ಮಾಲಿನ್ಯ ನಿರೋಧಕ ವ್ಯವಸ್ಥೆ ಹೊಂದಿದೆ. ಉಪಗ್ರಹ ಸಂಪರ್ಕದ ವ್ಯವಸ್ಥೆಯಿದ್ದು, ಶಸ್ತ್ರ ಚಿಕಿತ್ಸೆಯನ್ನು ಸಂಬಂಧಿತರು ಕಣ್ಣಾರೆ ಕಾಣಬಹುದು. ಮಾತ್ರವಲ್ಲ ತುತರ್ು ಸಂದರ್ಭದಲ್ಲಿ ದೂರದ ತಜ್ಞರನ್ನೂ ವೈದ್ಯರು ಸಂಪಕರ್ಿಸಿ ಮಾಹಿತಿ ಪಡೆಯಬಹುದು. ಖ್ಯಾತ ರೋಬೋಸಾಫ್ಟ್ ಕಂಪೆನಿ ಅಗತ್ಯ ತಂತ್ರಜ್ಞಾನ ಒದಗಿಸಿದೆ.
ಶಸ್ತ್ರ ಚಿಕಿತ್ಸಾ ಕೊಠಡಿಗಳು ಸಂಪೂರ್ಣ ಹವಾ ನಿಯಂತ್ರಿತವಾಗಿದ್ದು, 0.3 ಮೈಕ್ರಾನ್ ಫಿಲ್ಟರ್ ವ್ಯವಸ್ಥೆ ಇದೆ. ಇದರಿಂದ ಧೂಳು ನಿರೋಧಕವಾಗಿದ್ದು, ಸೋಂಕು ಕ್ರಿಮಿಗಳ ಚಲನೆಗೆ ತಡೆಯಾಗುತ್ತದೆ. ಆದ್ದರಿಂದ ಚಿಕಿತ್ಸೆ ವೇಳೆ ಧೂಳು, ಕೂದಲು ಇತ್ಯಾದಿಗಳಿಂದ ಸೋಂಕು ತಾಕದು.

ತನ್ನದೇ ಆದ ರೀತಿಯಲ್ಲಿ ಚಿಕಿತ್ಸೆ ನೀಡಿ ತಾನು ಕಲಿತ ಮೂಳೆ ಚಿಕಿತ್ಸಾ ವಿಧಾನದ ಮೂಲಕ ಜನರ ಸಂಕಷ್ಟ ದೂರ ಮಾಡಬೇಕು ಎಂಬ ಮಹದಾಸೆಯಿಂದ ಇದೀಗ ಕುಂದಾಪುರದಲ್ಲಿ ವಿವೇಕ್ ಹಾಸ್ಪಿಟಲ್ ಪ್ರಾರಂಭಿಸಲಾಗಿದೆ.
ರಕ್ತಸ್ರಾವ ಅಥವಾ ರಕ್ತಕೊರತೆಯಿಂದಲೇ ಹಲವಾರು ಮುಗ್ಧ ಜೀವಗಳು ಬಲಿಯಾಗುತ್ತಿವೆ ಎಂದು ಮರುಕಪಟ್ಟ ಡಾ || ವಿವೇಕ್, ಈ ಭಾಗದಲ್ಲಿ ಒಂದು ಸುಸಜ್ಜಿತ ಬ್ಲಡ್ಬ್ಯಾಂಕ್ ಸ್ಥಾಪನೆಯಾಗಬೇಕು ಎನ್ನುತ್ತಾರೆ. ಅವರ ದರ್ಮಪತ್ನಿ ಡಾ || ರೀತು ಸ್ತೀ ರೋಗ ತಜ್ಞೆಯಾಗಿದ್ದು, ಪತಿಯ ಎಲ್ಲ ಜನಸೇವೆಗಳಲ್ಲೂ ಸಹಭಾಗಿ. ವಿವೇಕ್ ಹಾಸ್ಪಿಟಲ್ನ ಸಹಾಯಕ ವೈದ್ಯಕೀಯ ನಿರ್ದೇಶಕರಾಗಿ ಪತಿಯ ಕನಸನ್ನು ನನಸಾಗಿಸಲು ಹೆಗಲು ನೀಡಿದ್ದಾರೆ.
ಫೆ.24 ರ ಭಾನುವಾರ ಉಡುಪಿ ಶಿರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ವಿವೇಕ್ ಹಾಸ್ಪಿಟಲನ್ನು ಉದ್ಘಾಟಿಸಿ ಲೋಕಾರ್ಪಣೆಗೊಳಿಸುವರು. ಬೈಂದೂರು ಶಾಸಕ ಕೆ. ಲಕ್ಷ್ಮೀನಾರಾಯಣ, ಕುಂದಾಪುರ ಪುರಸಭೆಯ ಮಾಜಿ ಅಧ್ಯಕ್ಷ ಕೆ.ಮೋಹನದಾಸ ಶೆಣೈ ಉಪಸ್ಥಿತರಿರುವರು.
ಚಿತ್ರ: ಕೆ.ಜಿ ವೈದ್ಯ