ಬೈಂದೂರು: ಉಡುಪಿ ಜಿಲ್ಲೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಹತ್ತಾರು ನೈಸರ್ಗಿಕ ಸೌಂದರ್ಯದ ಪ್ರದೇಶಗಳಿವೆ. ಈಗಾಗಲೇ ಸರಕಾರ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ನೆಲೆಯಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಕುಂದಾಪುರ ಅರಣ್ಯ ವಿಭಾಗ, ವಲಯ ಅರಣ್ಯಾಧಿಕಾರಿಗಳ ಕಛೇರಿ ಬೈಂದೂರು, ಇದರ ವತಿಯಿಂದ ಒತ್ತಿನೆಣೆ ಕ್ಷಿತಿಜ ನೇಸರಧಾಮದಲ್ಲಿ ಸುಮಾರು 20 ಲಕ್ಷಕ್ಕೂ ವೆಚ್ಚದಲ್ಲಿ ನಿರ್ಮಿಸಿದ ಅಭಿವೃದ್ಧಿ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿ ಪ್ರವಾಸಿಗರಿಗೆ ಸೂಕ್ತ ಮೂಲಸೌಕರ್ಯಗಳು ದೊರೆತಾಗ ಪ್ರವಾಸಿಸ್ಥಳ ಬೇಡಿಕೆ ಹೆಚ್ಚುತ್ತದೆ ಎಂದರು.
ಒತ್ತಿನೆಣೆ ಪರಿಸರದಲ್ಲಿ 1996 ರಲ್ಲಿ ಕ್ಷಿತಿಜ ನೇಸರಧಾಮವನ್ನು ಅಭಿವೃದ್ಧಿಪಡಿಸಿದ್ದು ಬಳಿಕ ಮೂಲಸೌಕರ್ಯದ ಕೊರತೆಯಿಂದಾಗಿ ಆಕರ್ಷಣೆ ಕಳೆದುಕೊಂಡಿತು. ಅರಣ್ಯ ಇಲಾಖೆ ವಿಶೇಷ ಅನುದಾನ ನೀಡುವ ಜೊತೆಗೆ ಪ್ರಸಕ್ತ ವರ್ಷ ೩ ಹೆಚ್ಚುವರಿ ಕಾವೇಜ್ ನಿರ್ಮಾಣ, ಸ್ವಾಗತ ಗೋಪುರ, ವೇದಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಟಾನಗೊಳಿಸಿದೆ. ಈ ಸಂದರ್ಭದಲ್ಲಿ ಬೈಂದೂರು ಶಾಸಕ ಕೆ. ಲಕ್ಷ್ಮೀನಾರಾಯಣ, ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಬು ಶೆಟ್ಟಿ, ಗೌರಿ ದೇವಾಡಿಗ, ಪ್ರಸನ್ನ ಕುಮಾರ್, ಪಡುವರಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ ಬಟ್ವಾಡಿ, ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧ ಪೂಜಾರ್ತಿ, ಕುಂದಾಪುರ ಉಪವಿಭಾಗಾಧಿಕಾರಿ ಯೋಗೇಶ್ವರ, ಶಾಂತಪ್ಪ, ಎ. ಗಣೇಶ್, ಅರಣ್ಯ ಉಪವಿಭಾಗಾಧಿಕಾರಿ ಮಂಜುನಾಥ ಶೆಟ್ಟಿ, ವನ್ಯಜೀವಿ ವಿಭಾಗದ ಉಪ ಅರಣ್ಯಾಧಿಕಾರಿ ಸತೀಶ್ ಬಾಬುರಾಯ್, ಬೈಂದೂರು ವಲಯಾರಣ್ಯಾಧಿಕಾರಿ ಬೈಜೇಶ್, ವಿನಯ ಕುಮಾರ್ ಮುಂತಾದವರು ಹಾಜರಿದ್ದರು.
ಕುಂದಾಪ್ರ ಡಾಟ್ ಕಾಂ - editor@kundapra.com