ಕಿರಿಮಂಜೇಶ್ವರ: ಇಲ್ಲಿನ ಗ್ರಾಮದ ಪಡುಮನೆ ಆಕಳಬೈಲು ನಿವಾಸಿ ಚಂದ್ರ ದೇವಾಡಿಗ ಮತ್ತು ಪ್ರೇಮಾ ದೇವಾಡಿಗ ದಂಪತಿಯ ಪುತ್ರ ಹತ್ತು ವರ್ಷದ ಬಾಲಕ ಪ್ರಶಾಂತ್ ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದು, ತಜ್ಞ ವೈದ್ಯರು ಆತನ ವೈದ್ಯಕೀಯ ಚಿಕಿತ್ಸೆಗೆ ಸುಮಾರು ಏಳು ಲಕ್ಷ ರೂಪಾಯಿ ವೆಚ್ಚ ತಗಲುವುದಾಗಿ ತಿಳಿಸಿದ್ದು, ಆರ್ಥಿಕವಾಗಿ ತೀರಾ ಬಡ ಕುಟುಂಬದವರಾದ ಈ ದಂಪತಿಗಳು ಹಣ ಹೊಂದಿಸಲು ಕಷ್ಟಪಡುತ್ತಿದ್ದಾರೆ. ಉದಾರ ಮನಸ್ಸಿನ ದಾನಿಗಳ ಸಹಾಯಹಸ್ತಕ್ಕಾಗಿ ಅವರು ಮನವಿ ಮಾಡಿಕೊಂಡಿದ್ದಾರೆ.
ಕಿರಿಮಂಜೇಶ್ವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೆಯ ತರಗತಿಯಲ್ಲಿ ಕಲಿಯುತ್ತಿರುವ ಬಾಲಕ ಪ್ರಶಾಂತ್ ಉತ್ತಮ ಗುಣನಡತೆಯನ್ನು ಹೊಂದಿದ್ದು, ಕಲಿಕೆಯಲ್ಲಿಯೂ ಉತ್ತಮ ಮಟ್ಟವನ್ನು ಕಾಯ್ದುಕೊಂಡಿದ್ದಾನೆ. ಮೂರು ತಿಂಗಳ ಹಿಂದೆ ಮಗುವಿಗೆ ಸಮಸ್ಯೆಯಿರುವುದು ಬೆಳಕಿಗೆ ಬಂದಿದ್ದು, ಕುಂದಾಪುರ ಹಾಗೂ ಮಣಿಪಾಲದಲ್ಲಿ ವೈದ್ಯರಿಂದ ತಪಾಸಣೆ ನಡೆಸಿದ ಬಳಿಕ ಬ್ಲಡ್ ಕ್ಯಾನ್ಸರ್ ಇರುವ ಸಂಗತಿ ಗಮನಕ್ಕೆ ಬಂದಿದೆ. ಸದ್ಯ ಮಣಿಪಾಲ ಆಸ್ಪತ್ರೆಯಲ್ಲಿ ಪ್ರಶಾಂತ್ ಚಿಕಿತ್ಸೆಗೆ ದಾಖಲಾಗಿದ್ದು, ವೈದ್ಯರಾದ ಡಾ. ಶ್ರೀಕಿರಣ್ ಹೆಬ್ಬಾರ್ ಅವರು ಚಿಕಿತ್ಸಾ ವೆಚ್ಚದ ಮಾಹಿತಿಯನ್ನು ಆತನ ಹೆತ್ತವರಿಗೆ ನೀಡಿರುತ್ತಾರೆ. ಆದರೆ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರದ ಚಂದ್ರ ದೇವಾಡಿಗ ಅವರು ಮಗನ ವೈದ್ಯಕೀಯ ಚಿಕಿತ್ಸೆಗೆ ಹಣವನ್ನು ಹೊಂದಿಸಲು ಪರದಾಡುತ್ತಿದ್ದಾರೆ.
ದಾನಿಗಳ ಮಾನವೀಯ ನೆರವು ದೊರಕಿದಲ್ಲಿ ಬಡಕುಟುಂಬದವನಾದ ಬಾಲಕ ಪ್ರಶಾಂತ್ ಸಮಸ್ಯೆಯಿಂದ ಪಾರಾಗಬಹುದು. ಈ ಬಾಲಕನ ಚಿಕಿತ್ಸೆಗೆ ಉದಾರ ಸಹಾಯ ನೀಡಲಿಚ್ಛಿಸುವವರು ಮಗುವಿನ ತಾಯಿ ಪ್ರೇಮಾ ಅವರ ಹೆಸರಿನಲ್ಲಿರುವ ಸಿಂಡಿಕೇಟ್ ಬ್ಯಾಂಕ್ ನಾವುಂದ ಶಾಖೆಯ ಉಳಿತಾಯ ಖಾತೆ ಸಂಖ್ಯೆ 01732200076826ಕ್ಕೆ ಸಲ್ಲಿಸಬಹುದು. ಮಾಹಿತಿಗಾಗಿ ಚಂದ್ರ ದೇವಾಡಿಗ ಅವರ ದೂರವಾಣಿ ಸಂಖ್ಯೆ 08884785621ನ್ನು ಸಂಪಕರ್ಕಿಸಬಹುದು.
ಕುಂದಾಪ್ರ ಡಾಟ್ ಕಾಂ - editor@kundapra.com